ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಟ್ರೈನ್ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಲೀ. ನೀರು ಹೊತ್ತ ರೈಲು ಚೆನ್ನೈ ತಲುಪಿದೆ.
ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಟ್ರೈನ್ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಲೀ. ನೀರು ಹೊತ್ತ ರೈಲು ಚೆನ್ನೈ ತಲುಪಿದೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜೋಲಾರ್ಪೇಟ್ನಿಂದ 50 ಟ್ಯಾಂಕರ್ಗಳಲ್ಲಿ 25 ಲಕ್ಷ ಲೀ. ನೀರನ್ನು ತುಂಬಿಸಿಕೊಂಡು ಜುಲೈ 12 ರ ಶುಕ್ರವಾರ ಮಧ್ಯಾಹ್ನ ಚೆನ್ನೈಗೆ ತರಲಾಗಿದೆ. ಈ ನೀರನ್ನು ಶುದ್ಧೀಕರಿಸಿದ ನಂತರ ನೀರನ್ನು ಲಾರಿಗಳಲ್ಲಿ ತುಂಬಿ ಜನರಿಗೆ ತಲುಪಿಸಲಾಗುವುದು. ಈ ವ್ಯವಸ್ಥೆ ಮುಂದಿನ 6 ತಿಂಗಳವರೆಗೆ ಮುಂದುವರಿಯಲಿದೆ. ಮಳೆ ಬಂದು ಜಲಮೂಲಗಳು ಭರ್ತಿಯಾದ ನಂತರ ರೈಲಿನ ಮೂಲಕ ನೀರು ತರುವುದನ್ನು ನಿಲ್ಲಿಸಲಾಗುವುದು ಎಂದು ಚೆನ್ನೈ ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈಗೆ ನೀರು ಸರಬರಾಜು ಮಾಡುವ 4 ಕೆರೆಗಳು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚೆನ್ನೈನಲ್ಲಿ ನೀರಿನ ಅಭಾವ ಉಂಟಾಗಿದೆ. ಪ್ರತಿ ದಿನ 20 ಕೋಟಿ ಲೀ. ನೀರಿನ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ.
ಈ ಮೊದಲು 2016 ರಲ್ಲಿ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಭೀಕರ ಬರ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಮೀರಜ್ನಿಂದ ಲಾತೂರ್ಗೆ ರೈಲಿನ ಮೂಲಕ ನೀರು ಸರಬರಾಜು ಮಾಡಿತ್ತು. (ಏಜೆನ್ಸೀಸ್)